Tuesday, August 25, 2015

ಪುರುಷನೋಲಗವೆಲ್ಲ ಮರಣದೂಳಿಗವೆನುತ (787)

ಪುರುಷನೋಲಗವೆಲ್ಲ ಮರಣದೂಳಿಗವೆನುತ |
ಕೊರಗುತಿರಲಪ್ಪುದೇನ್? (ಅದು ತಪ್ಪಿತೇನು?)||
ನರಜನುಮ ಪರಿಶುದ್ಧಿಯವಕಾಶವರಿತದನು |
ಪರಿಪುಷ್ಟಿಯನು ಗಳಿಸು - ಮರುಳ ಮುನಿಯ || (೭೮೭)

(ಪುರುಷನ+ಓಲಗವೆಲ್ಲ)(ಮರಣದ+ಊಳಿಗ+ಎನುತ)(ಕೊರಗುತ+ಇರಲ್+ಅಪ್ಪುದು+ಏನ್)(ಪರಿಶುದ್ಧಿಯ+ಅವಕಾಶ+ಅರಿತು+ಅದನು)

ಮನುಷ್ಯನ ದರ್ಬಾರು ಮತ್ತು ದೌಲತ್ತುಗಳೆಲ್ಲವೂ (ಓಲಗ) ಕೊನೆಗೆ ಒಂದು ದಿನ ಸಾವನ್ನು ಅಪ್ಪಲು ನಡೆಸುತ್ತಿರುವ ಚಾಕರಿ ಎಂದೆನುತ್ತಾ, ದುಃಖಿಸುತ್ತಿದ್ದರೇನು ಬಂತು? ಇದನ್ನು ತಪ್ಪಿಸಲಾಗುವುದೇನು? ಮನುಷ್ಯ ಜನ್ಮವು ಅವನು ಅತ್ಯಂತ ಶುದ್ಧನಾಗಲು ಪರಮಾತ್ಮನು ಕೊಟ್ಟಿರುವ ಒಂದು ಸದಾವಕಾಶ. ಇದನ್ನು ನೀನು ತಿಳಿದುಕೊಂಡು ನಿನ್ನ ಜೀವನವು ಸಮೃದ್ಧಿಯಾಗುವಂತೆ (ಪರಿಪುಷ್ಟ) ಮಾಡಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Even a royal life of man is mere menial service under master Death
What do you gain by grieving so?
Human life is an opportunity for purification
Know this and acquire excellence – Marula Muniya (787)
(Translation from "Thus Sang Marula Muniya" by Sri. Narasimha Bhat)


Friday, August 14, 2015

ಪೂರ್ವಜನ್ಮದ ಕರ್ಮಮನುಭವಿಸಲಹುದೀಗ (786)

ಪೂರ್ವಜನ್ಮದ ಕರ್ಮಮನುಭವಿಸಲಹುದೀಗ |
ಭಾವಿ ಕಾಲವುಮಿಹುದು ಶೇಷ ಮಿಕ್ಕಿರಲು ||
ಜೀವಕ್ಕೆ ಹಿಂದುಂಟು ಮುಂದುಂಟು ಮುಗಿವಿಲ್ಲ |
ಆವಗಂ ನೆನೆದು ಬಾಳ್ - ಮರುಳ ಮುನಿಯ || (೭೮೬)

(ಕರ್ಮಂ+ಅನುಭವಿಸಲ್+ಅಹುದು+ಈಗ)(ಕಾಲವುಂ+ಇಹುದು)(ಹಿಂದು+ಉಂಟು)(ಮುಂದು+ಉಂಟು)()

ನಾವು ಈವಾಗ ನಮ್ಮ ಹಿಂದಿನ ಜನ್ಮಗಳ ಕರ್ಮಗಳ ಫಲಗಳನ್ನನುಭವಿಸಲು ಹುಟ್ಟಿದ್ದೇವೆ. ಆದರೆ ಆ ಕರ್ಮಫಲಗಳ ಋಣಶೇಷಗಳಿನ್ನೂ ಇರುವುದರಿಂದ, ಭವಿಷ್ಯತ್ತಿನಲ್ಲೂ ನಾವು ಅವುಗಳನ್ನು ತೀರಿಸಬೇಕಾಗುತ್ತದೆ. ಒಂದು ಜೀವಕ್ಕೆ ಭೂತ ಮತ್ತು ಭವಿಷ್ಯತ್ತುಗಳೆರಡೂ ಇವೆ. ಮುಕ್ತಾಯ ಮಾತ್ರ ಇಲ್ಲ. ಇದನ್ನು ನೀನು ಎಂದೆಂದಿಗೂ ಜ್ಞಾಪಕದಲ್ಲಿಟ್ಟುಕೊಂಡು ನಿನ್ನ ಜೀವನವನ್ನು ನಡೆಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You should experience the fruit of Karma of your past lives
You have your future lives if any balance still remains
A soul has a past and a future but it has no end
Keep this in mind always and live- Marula Muniya (786)
(Translation from "Thus Sang Marula Muniya" by Sri. Narasimha Bhat)